ಪಾರ್ಶ್ವವಾಯು ರೋಗಿಯನ್ನು ಜೋಲಿಯಲ್ಲಿ ಹೊತ್ತು ಚಿಕಿತ್ಸೆಗಾಗಿ ಐದುಕಿಲೋಮೀಟರ್ ನೆಡೆದ ಕುಟುಂಬ!

827

ಕಾರವಾರ :- ಅಂಬುಲೆನ್ಸ್ ಇಲ್ಲದೇ ಐದು ಕಿಲೋಮೀಟರ್ ಜೋಲಿಯಲ್ಲಿ ಪಾರ್ಶ್ವವಾಯು ಪೀಡಿತ ರೋಗಿಯನ್ನು ಕಾಡಿನಲ್ಲೇ ಆಸ್ಪತ್ರೆಗೆ ಹೊತ್ತೊಯ್ದ ಮನ ಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಟ್ಟಿಕೇರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ವರೀಣಬೇಣ ದಲ್ಲಿ ನಡೆದಿದೆ.

ನೂರಾ ಪೊಕ್ಕ ಗೌಡ.(೭೦) ಎಂಬುವವರು ನಿನ್ನೆ ಪಾರ್ಶವಾಯು ಗೆ ಒಳಗಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಿತ್ತು. ಆದರೇ, ವರೀಲಬೇಣಾ ದಲ್ಲಿ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ , ಅಂಬುಲೆಂನ್ಸ್ ಬಾರದೇ ಇರುವದರಿಂದ ಗ್ರಾಮದಿಂದ ಕಾಡುಹಾದಿಯಲ್ಲಿ ಐದು ಕಿಲೋಮೀಟರ್ ಜೋಲಿ ಹೊತ್ತು ಅಂಕೋಲ ನಗರಕ್ಕೆ ಕುರ್ಚಿಯಲ್ಲಿ ಕೂರಿಸಿ, ಕಾಡಿನ ದಟ್ಟ ಹಾದಿಯಲ್ಲಿ ಕುಟುಂಬದವರು ಜೋಲಿಮಾಡಿ ಕರೆತಂದಿದ್ದಾರೆ.

ಇನ್ನು ಅಂಕೋಲದಲ್ಲಿ ಸಹ ಅಂಬುಲೆನ್ಸ್ ಸಿಗದ ಕಾರಣ ಖಾಸಗಿ ವಾಹನ ಮಾಡಿ ಮಂಗಳೂರಿಗೆ ಕರೆದೊಯ್ಯಲಾಗಿದ್ದು , ಈ ಮನ ಕಲಕುವ ದೃಶ್ಯ ಕನ್ನಡವಾಣಿಗೆ ದೊರತಿದೆ.

ಜಿಲ್ಲೆಯ ಹಲವು ಭಾಗದಲ್ಲಿ ನಗರ ಸಮೀಪವಿದ್ದರೂ ರಸ್ತೆಗಳು ಸಮರ್ಪಕವಾಗಿ ಇಲ್ಲದ ಕಾರಣ ಅಂಬುಲೆನ್ಸ್ ಗಳು ಬರಲು ನಿರಾಕರಿಸುತ್ತಾರೆ.

ಈ ಗ್ರಾಮದಲ್ಲಿ 11 ಮನೆಗಳಿವೆ ,ವಿದ್ಯುತ್ ಸಂಪರ್ಕ ಇತ್ತೀಚೆಗೆ ದೊರೆತಿದೆ.ಹಟ್ಟಿಕೇರಿ ಭಾಗದಿಂದ ಈ ಗ್ರಾಮಕ್ಕೆ ತೆರಳಲು 11 ಕಿ.ಮೀ ಕ್ರಮಿಸಬೇಕು. ಇದರಲ್ಲಿ ಐದು ಕಿಲೋಮೀಟರ್ ರಸ್ತೆ ಕಾಡು ನುಂಗಿದೆ. ಹಳ್ಳಿಗೆ ಗಬ್ಬೆದ್ದ ಬಿ.ಎಸ್.ಎನ್.ಎಲ್ ಸಿಗ್ನಲ್ ಮಾತ್ರ ಸಂಪರ್ಕ ಸಾಧನ.

ಇಲ್ಲಿನ ಊರಿನ ಮಕ್ಕಳು ಶಿಕ್ಷಣಕ್ಕೆ ಪ್ರತಿ ದಿನ 5 ಕಿ.ಮೀ. ಕಾಲುನಡಿಗೆಯಲ್ಲೇ ಕ್ರಮಿಸಬೇಕು. ಮಳೆಗಾಲ ಬಂತೆಂದರೆ ,ಆರೋಗ್ಯ ಕೆಟ್ಟಿತೆಂದರೆ ನಗರ ಮಾರುದೂರ ಇದ್ದರೂ ಊರಿನಲ್ಲೇ ಬಂಧಿಯಾಗಿರಬೇಕು. ಅದೃಷ್ಟ ನೆಟ್ಟಗಿಲ್ಲದಿದ್ದರೆ ,ಆರೋಗ್ಯ ಕೆಟ್ಟವರು ಸೀದಾ ಶಿವನ ಪಾದ ಸೇರುತ್ತಾರೆ‌.

ಹೀಗಿರುವ ಗ್ರಾಮಕ್ಕೆ ಸರ್ಕಾರದ ಮೂಲಸೌಕರ್ಯಗಳು ಕಣ್ಣಡಿಯೊಳಗಿನ ಗಂಟಿನಂತೆ ಮಿರ ಮಿರ ಹೊಳೆಯುವುದೇ ವಿನಹ ಕೈ ಎಟುಕುವುದಿಲ್ಲ.

ಎದ್ದೇಳು ಜಿಲ್ಲಾಡಳಿತ!

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು ಜಿಲ್ಲೆಯಲ್ಲಿ ಸದ್ಯಕ್ಕೆ ಇಲ್ಲ . ಮೂಗಿಗೆ ಜನಪ್ರತಿನಿಧಿಗಳು ಪ್ರತಿ ಭಾರಿ ತುಪ್ಪ ವರೆಸುವುದು ಸರ್ವೇ ಸಾಮಾನ್ಯ.

ನೆಟ್ಟಗಿರುವ ಸವಲತ್ತುಗಳು ಸಹ ಮೆಂಟೆನೆನ್ಸ್ ಇಲ್ಲದೇ ಕುಲಗೆಟ್ಟಿವೆ.

ಜಿಲ್ಲೆಯಲ್ಲಿ ಇರುವ 25 ಅಂಬುಲೆನ್ಸ್ ಗಳಲ್ಲಿ ಎಂಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದ ಅಂಬುಲೆನ್ಸ್ ಗಳು ಕೆಟ್ಟು ನಿಂತಿದೆ. ಹೀಗಾಗಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸಿಗದೇ ಪರದಾಡುವಂತಾಗಿದ್ದು ಜೋಯಿಡಾ,ಯಲ್ಲಾಪುರ,ಅಂಕೋಲ ,ಕಾರವಾರ ಭಾಗದಲ್ಲಿ ಬಹುತೇಕ ಹಲವು ಹಳ್ಳಿಗಳಲ್ಲಿ ಜೋಲಿಯೇ ಅಂಬುಲೆನ್ಸ್ ನಂತಾಗಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಣ್ತೆರೆದು ಕೆಟ್ಟುಹೋದ ಅಂಬುಲೆನ್ಸ್ ಸರಿಪಡಿಸಿ, ರೋಗಗಳಿಗೆ ನೆರವಾಗಬೇಕಿದ್ದು ಜನ ತುತ್ತೂರಿ ಊದಿದರೂ ಎಮ್ಮೆ ಏನೂ ಮಾಡಲಾರದು ಎಂಬಂತಾಗದೇ ಜನರ ಜೀವದ ಜೊತೆ ಚಲ್ಲಾಟ ಆಡದೇ ವ್ಯವಸ್ತೆ ಮಾಡಬೇಕು ಎಂಬುದು ನೊಂದ ನಾಗರೀಕರ ಅಹವಾಲು.

ನಿಮ್ಮೂರಿನ ಸಮಸ್ಯೆ ,ಸುದ್ದಿಗಳನ್ನು ಈ ಕೆಳಗಿನ ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.
9741058799




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!