ಶಿವಮೊಗ್ಗ :- ಶಿವಮೊಗ್ಗದಲ್ಲಿ ಇಂದು 6 ಜನರಿಗೆ ಕರೋನಾ ಸೋಂಕು ದೃಡಪಟ್ಟಿದೆ.ಈ ಮೂಲಕ
ಜಿಲ್ಲೆಯಲ್ಲಿ 41ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮೂವರು ಪೊಲೀಸರಿಗೆ ಕೊರೊನಾ ಸೋಂಕು ದೃಡಪಟ್ಟಿದೆ.
P-2830, P-2882, P-2852 ಈ ಮೂವರು ಸೊಂಕು ತಗುಲಿದ ಕೆ.ಎಸ್.ಆರ್.ಪಿ. ಪೊಲೀಸರಾಗಿದ್ದಾರೆ.
ಕಳೆದೆರೆಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಕರ್ತವ್ಯ ಮುಗಿಸಿ, ಶಿವಮೊಗ್ಗಕ್ಕೆ ವಾಪಾಸ್ ಬಂದಿದ್ದ ಕೆ.ಎಸ್ .ಆರ್ .ಪಿ ಪೊಲೀಸರ ಗಂಟಲು ದ್ರವ ವನ್ನು ಗುರುವಾರದಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆ ಬಳಿಕ ಕೆ.ಎಸ್.ಆರ್.ಪಿ. ಕ್ಯಾಂಪ್ ಗೆ ಕಳುಹಿಸಲಾಗಿತ್ತು.
ವರದಿಯಲ್ಲಿ ಪಾಸಿಟಿವ್ ಕಂಡು ಬಂದ ಬಳಿಕ ಪುನಃ ಅವರನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಜಿಲ್ಲೆಯಲ್ಲಿ P-2853 ನಂ. 7 ವರ್ಷದ ಬಾಲಕ, P-2854 ನಂ. 3 ವರ್ಷದ ಮಗು , P-2855 ಮಹಿಳೆ ಸೇರಿದಂತೆ ಮೂವರಿಗೆ ಕೊರೋನಾ ಸೋಂಕು ದೃಡವಾಗಿದ್ದು ಇವರೆಲ್ಲರೂ ಪಂಜಾಬ್ ನಿಂದ ಕಳೆದ 15 ದಿನಗಳ ಹಿಂದೆ ಶಿವಮೊಗ್ಗಕ್ಕೆ ವಾಪಾಸ್ ಬಂದಿದ್ದರು.
ಶಿವಮೊಗ್ಗದ ಹಸೂಡಿಯ ಹಕ್ಕಿಪಿಕ್ಕಿ ಕ್ಯಾಂಪ್ ನಲ್ಲಿ ವಾಸವಾಗಿರುವ ಇವರನ್ನು ಕ್ವಾರಂಟೈನ್ ಅವಧಿ ಮುಗಿದ ಬಳಿಕ ಗಂಟಲು ದ್ರವ ಪರೀಕ್ಷೆ ನಡೆಸಿ ವಾಪಾಸ್ ಅವರ ಗ್ರಾಮಕ್ಕೆ ಕಳುಹಿಸಲಾಗಿತ್ತು.
ಆದರೆ, ಅವರನ್ನು ವಾಪಾಸ್ ಕಳುಹಿಸಿದ ಬಳಿಕ ಅವರಲ್ಲಿ ಪಾಸಿಟಿವ್ ಇರುವುದು ದೃಡವಾಗಿರುವುದು ಬೆಚ್ಚಿ ಬೀಳುವಂತೆ ಮಾಡಿದೆ.
ವರದಿ ಬರುವ ಮುಂಚೆಯೇ ಮನೆಗೆ ಕಳುಹಿಸಿದ್ದರಿಂದ ಹಸೂಡಿಯ ಹಕ್ಕಿಪಿಕ್ಕಿ ಕ್ಯಾಂಪ್ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಇದಲ್ಲದೇ ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ. ಕ್ಯಾಂಪ್ ನ ಕ್ವಾಟ್ರಸ್ ಏರಿಯಾ ಕೂಡ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ವರದಿ ಬರುವ ಮುಂಚಿತವಾಗಿ ಕ್ವಾರಂಟೈನ್ ಸೆಂಟರ್ ನಿಂದ ಸಿಂಕಿತರನ್ನು ವಾಪಾಸ್ ಕಳಿಸುವ ಮೂಲಕ ಜಿಲ್ಲಾಡಳಿತ ಎಡವಟ್ಟು ಮಾಡಿಕೊಂಡಿದ್ದು ಈಗ ಸೊಂಕು ಮತ್ತಷ್ಟು ಜನರಲ್ಲಿ ಹಬ್ಬುವ ಆತಂಕ ಹೆಚ್ಚುವಂತೆ ಮಾಡಿದೆ.