
ಕಾರವಾರ: ಅಪರಿಚಿತ ಲಾರಿಯೊಂದು ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಗ್ರಾಮದ ಬಳಿ ನಡೆದಿದೆ.
ತಾಲ್ಲೂಕಿನ ಬಡಗೇರಿ ಗ್ರಾಮದ ನಾಗರಾಜ್ ಲಕ್ಷ್ಮಣ ಗೌಡ(೩೦) ಹಾಗೂ ಬಾಳಾ ಮಾನು ಗೌಡ(೨೬) ಮೃತ ಯುವಕರು. ಈ ಇಬ್ಬರು ಯುವಕರು ಅಂಕೋಲಾದಿಂದ ಯಲ್ಲಾಪುರ ಕಡೆ ತೆರಳುವಾಗ ಅಪರಿಚಿತ ಲಾರಿ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಓರ್ವನ ತಲೆ ಒಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಅಪಘಾತದ ನಂತರ ಲಾರಿಯೊಂದಿಗೆ ಚಾಲಕ ಪರಾರಿಯಾಗಿದ್ದು, ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.