ಕಾರವಾರ:- ಮಳೆಬಂತು ಅಂದ್ರೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗುಯ ಪ್ರೌಢಶಾಲೆಯ ಹಿಂಭಾಗದಿಂದ ಶಾಲೆಗೆ ನೀರು ನುಗ್ಗಿ ಮೈದಾನ ಕೆರೆಯಂತಾಗುತಿತ್ತು. ಇದನ್ನು ಗಮನಿಸಿದ ಕುಮಟಾದ ಯುವ ಬ್ರಿಗೇಡ್ ತಂಡ ಒಂದು ವಾರಗಳ ಕಾಲ ಶ್ರಮದಾನ ಮಾಡುವ ಮೂಲಕ ಶಾಲೆಯ ಹಿಂಭಾಗ ಒಡ್ಡು ನಿರ್ಮಿಸಿ ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಹಲವು ವರ್ಷಗಳಿಂದ ಶಾಲೆಯ ಹಿಂಭಾಗದಲ್ಲಿ ಮಳೆ ನೀರಿನಿಂದ ನೀರು ತುಂಬಿ ಶಾಲೆಗೆ ತೊಂದರೆಯಾಗುತಿತ್ತು. ಈ ಹಿಂದೆ ಇದ್ದ ಒಡ್ಡು ಸಹ ಮಳೆಯ ಆರ್ಭಟಕ್ಕೆ ಕೊಚ್ಚಿಹೋಗಿದ್ದು ಇದನ್ನು ಸರಿಪಡಿಸಲು ಸ್ಥಳೀಯ ಆಡಳಿತ ನಿರ್ಲಕ್ಷ ವಹಿಸಿತ್ತು. ಆದರೇ ಶಾಲೆಯ ಮುಖ್ಯೋಪಾಧ್ಯಾಯ ದಯಾನಂದ ಬಂಡಾರಿಯವರು ಯುವ ಬ್ರಿಗೇಡ್ ಯುವಕರನ್ನು ಸಂಪರ್ಕಿಸಿ ಸಹಾಯ ಕೇಳಿದ್ದರು. ಇವರ ಮಾತಿಗೆ ದ್ವನಿಯಾದ ಯುವ ಬ್ರಿಗೇಡ್ ನ ಅಣ್ಣಪ್ಪ ನಾಯ್ಕ,ಸತೀಶ್ ಪಟಗಾರ್,ಪ್ರಕಾಶ್ ನಾಯ್ಕ,ಕಿಶೋರ್ ಶಟ್ಟಿ ,ಗೌರೀಶ್ ನಾಯ್ಕ,ಸಂದೀಪ್ ಮಡಿವಾಳ,ಬಬ್ಲು,ಗಿರೀಶ್ ಎಂಬುವವರು ಶ್ರಮದಾನ ಮಾಡಿ ಒಡೆದು ಹೋದ ಒಡ್ಡನ್ನು ಪುನಹಾ ನಿರ್ಮಿಸಿದ್ದಾರೆ.