ಕಾರವಾರ: ಅಣಶಿ ಘಟ್ಟದಲ್ಲಿ ಹೆದ್ದಾರಿ ಸಹಿತ ಗುಡ್ಡ ಕುಸಿದು ಒಂದು ತಿಂಗಳು ಕಳೆದಿದ್ದು ಈವರೆಗೂ ಮರುಸಂಪರ್ಕ ಸಾಧ್ಯವಾಗಿರಲಿಲ್ಲ. ಕಾಲು ಹಾದಿ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು ಯಾವುದೇ ಪ್ರಯೋಜನ ಕೂಡ ಆಗಿರಲಿಲ್ಲ. ಆದರೆ ಜಿಲ್ಲಾ ಕೇಂದ್ರ ಸಂಪರ್ಕ ಕಳೆದುಕೊಂಡು ಹತ್ತಾರು ಸಮಸ್ಯೆಗಳಿಂದಾಗಿ ಬೇಸತ್ತಿದ್ದ ಜೋಯಿಡಾ ಭಾಗದ ಸ್ಥಳೀಯರೇ ಇದೀಗ ರಸ್ತೆಯಲ್ಲಿ ಕುಸಿದಿದ್ದ ಗುಡ್ಡ ಅಗೆದು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದಾರೆ.
ಜೆಸಿಬಿಗಳ ಮೂಲಕ ಗುಡ್ಡ ತೆರವಿನ ಕಾಮಗಾರಿ ಆರಂಭಿಸಿದ ಸ್ಥಳೀಯರು ಇದೀಗ ವಾಹನ ಓಡಾಡಲು ವ್ಯವಸ್ಥೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕಳೆದ ಜುಲೈ ಅಂತ್ಯದಲ್ಲಿ ಸುರಿದ ಭಾರಿ ಮಳೆಗೆ ಕಾರವಾರ-ಬೆಳಗಾವಿ ಸಂಪರ್ಕಿಸುವ ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿಯ ಅಣಶಿ ಘಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡಕುಸಿತವಾಗಿತ್ತು. ಹೆದ್ದಾರಿ ಸಹಿತ ಗುಡ್ಡ ನೂರಾರು ಅಡಿಗಳ ಆಳಕ್ಕೆ ಕುಸಿದ ಕಾರಣ ಈ ಭಾಗದ ಸಂಚಾರ ಸಂಪೂರ್ಣ ಸಂಪರ್ಕ ಕಡಿತಗೊಂಡಿತ್ತು. ಮಾತ್ರವಲ್ಲದೆ ಕಾಲು ಹಾದಿಯನ್ನು ಸಹ ಮಾಡಿಕೊಂಡು ಓಡಾಡಲು ಸಾಧ್ಯವಾಗದ ಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು.
ಹೆದ್ದಾರಿ ಕಡಿತಗೊಂಡ ಕಾರಣ ಜೊಯಿಡಾ, ದಾಂಡೇಲಿ, ಹಳಿಯಾಳ ಭಾಗದ ಜನ ತೊಂದರೆ ಅನುಭವಿಸುವಂತಾಗಿತ್ತು. ಮಾತ್ರವಲ್ಲದೆ ನೂರಾರು ಕಿ.ಮೀ ಸುತ್ತಿ ಯಲ್ಲಾಪುರ ರಸ್ತೆ ಮೇಲೆ ಓಡಾಟಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಧಾರವಾಡ, ಬೆಳಗಾವಿ ಭಾಗದಿಂದ ಪ್ರತಿನಿತ್ಯ ಕಾರವಾರಕ್ಕೆ ಬರುತ್ತಿದ್ದ ಹಾಲು, ತರಕಾರಿ, ಸೇರಿ ಅಗತ್ಯ ವಸ್ತುಗಳ ಸಾಗಾಟಕ್ಕೂ ತೊಂದರೆಯಾಗಿತ್ತು.
ಸಂಪರ್ಕ ಕಡಿತದಿಂದ ಜಿಲ್ಲಾ ಕೇಂದ್ರದಲ್ಲಿರುವ ಕಚೇರಿಗಳನ್ನು, ಆಸ್ಪತ್ರೆ, ಕದ್ರಾ, ಕೈಗಾ ಹೀಗೆ ವಿವಿಧ ಭಾಗಗಳಿಗೆ ಕೆಲಸಕ್ಕೆ ತೆರಳುವವರು ಸೇರಿ ಇನ್ನಿತರರು ತೀವ್ರ ತೊಂದರೆಗೆ ತುತ್ತಾಗಿದ್ದರು.
ಗುಡ್ಡ ಕುಸಿದು ಹೆದ್ದಾರಿ ಸಂಚಾರ ಸ್ಥಗೀತಗೊಂಡ ಕಾರಣ ಜೊಯಿಡಾ, ದಾಂಡೇಲಿ ಭಾಗದ ಜನರಿಗೆ ಇತ್ತ ಕಾರವಾರ ಸಂಪರ್ಕ ಮಾತ್ರವಲ್ಲದೆ ಗೋವಾ ರಸ್ತೆ ಕೂಡ ಸ್ಥಗಿತಗೊಂಡು ಅಲ್ಲಿಗೂ ತೆರಳಲಾಗುತ್ತಿರಲಿಲ್ಲ.
ಯಲ್ಲಾಪುರ ಮೂಲಕ ಓಡಾಡುವುದು ಕಷ್ಟ ಸಾಧ್ಯವಾದ ಕಾರಣ ಕಾಲು ಹಾದಿಯನ್ನಾದರು ನಿರ್ಮಿಸಿಕೊಡುವಂತೆ ಪಿಡಬ್ಲ್ಯೂಡಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಆದರೇ ಸರ್ವೆ ಕಾರ್ಯ ಮಾಡಿದ್ದ ಜಿಲ್ಲಾಡಳಿತ ಮಳೆ ನಿಂತರೂ ಕಾಮಗಾರಿ ಪ್ರಾರಂಭ ಮಾಡಿರಲಿಲ್ಲ.
ಇನ್ನು ಸಮಸ್ಯೆ ಗಂಭೀರತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಬಳಿ ತಿಳಿಸಿದಾಗಲು ಸಚಿವರು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ಇನ್ನು ಸ್ಥಳೀಯ ಮುಖಂಡ ರಮೇಶ ನಾಯ್ಕ ಅವರ ಸಹಕಾರದಲ್ಲಿ ಜೆಸಿಬಿ ಮೂಲಕ ಕೆಲಸ ಪ್ರಾರಂಭಿಸಿದ್ದಾರೆ. ಕುದ್ದು ಸ್ಥಳೀಯರೇ 50 ಕ್ಕೂ ಹೆಚ್ಚು ಜನ ಭಾಗಿಯಾಗಿ ಕೆಲಸ ಪ್ರಾರಂಭ ಮಾಡಿದ್ದಾರೆ.
ಅಧಿಕಾರಿಗಳ ಭರವಸೆ ಅಸಹಾಯಕತೆಯಿಂದ ಬೇಸತ್ತಿರುವ ಜನ ಇದೀಗ ಹೆದ್ದಾರಿ ನಿರ್ಮಾಣಕ್ಕೆ ಪಣತೊಟ್ಟು ರಸ್ತೆ ನಿರ್ಮಾಣ ಮಾಡಿ ಸಂಚಾರ ಮಾಡಲು ವ್ಯವಸ್ಥೆ ಮಾಡಿದ್ದಾರೆ.